Friday, September 23, 2016

ಸದ್ಗುರು ಶ್ರೀಧರ ವಿರಚಿತ ಅಭಯದಾನ ಶ್ಲೋಕದ ಷಟ್ಪದಿ ರೂಪಾಂತರಣ :

ಸದ್ಗುರು ಶ್ರೀಧರ ವಿರಚಿತ ಅಭಯದಾನ ಶ್ಲೋಕದ ಷಟ್ಪದಿ ರೂಪಾಂತರಣ :
------------------------------------------------------------------------------
ಸದ್ಗುರು ಭಗವಾನರು ಸನ್ಯಾಸಗ್ರಹಣ ಸಮಯದಲ್ಲಿ ರಚಿಸಿದ ಹದಿಮೂರು ಅಭಯದಾನ ಶ್ಲೋಕಗಳು ಗುರುಮಹಿಮೆ, ಗುರುಕಾರುಣ್ಯ, ಗುರುವಿನ ಅಗಾಧತೆ ಇತ್ಯಾದಿಗಳಿಗೆ ದ್ಯೋತಕವಾಗಿವೆ. #ಶ್ರೀಧರಭಾಮಿನಿಧಾರೆ ಬರೆಯುವ ಸಂದರ್ಭದಲ್ಲಿ ಇದನ್ನು ಓದಿಯೂ ನನಗೆ ಇವುಗಳ ಮೇಲೆ ಷಟ್ಪದಿ ಬರೆಯಲಾಗಿರಲಿಲ್ಲ. ಆದರೆ ಇಂದು ಬೆಳಗಿನಿಂದ,(30.08.2016) ಬರೆಯೋಣ ಅನ್ನಿಸಿ, ಗುರುಕರುಣೆಯೊಂದಿಗೆ ಬರೆಯಲು ಸಾಧ್ಯವಾಯಿತು. ತಾತ್ಪರ್ಯ ಬರೆದು ಇದನ್ನು ಧಾರೆಯೊಂದಿಗೆ ಸೇರಿಸುತ್ತೇನಾದರೂ, ಬೇರೆಯದೇ ಒಂದು ಗುಚ್ಛ ಮಾಡಿ ನಿಮ್ಮೆದುರು ಇಡೋಣ ಎನ್ನಿಸಿದ್ದರಿಂದ , ಇಲ್ಲಿ ಕೊಡುತ್ತಿದ್ದೇನೆ. ಚಿತ್ರಗಳಲ್ಲಿ ಮೂಲ ಕೊಟ್ಟಿದ್ದೇನೆ.
ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯವಾಗಲಿ.
-----------------------------------------------------------------------------



೧)
ಅಭಯನೀಡುತಲಲ್ಲಿ ಗುರುವರ
ಅಭಯದಾನವ ಮಾಡಿಹರು ಆ
ಅಭಯರೂಪಿಗೆ ಮನದಿವಂದಿಪೆ ರಕ್ಷಿಸನವರತಾ ||
ವಿಭವಹೊಂದಿದ ಕರುಣವಾರಿಧಿ
ಅಭಯ ಆನಂದಾದಿರೂಪದ
ವಿಭುವ ಬೊಮ್ಮನೆ ನಾನು ಎನ್ನುತ ಮಾಯೆ ತೊಡೆದಿಹರೂ ||


ಅತಿಯಸುಖವನುಪಡೆಯಲೋಸುಗ
ಮತಿಗೆಬೇಕದು ವಿದ್ಯೆ ದೇವತೆ
ಜೊತೆಗೆ ಬೇಕೂ ಬ್ರಹ್ಮನೊಲುಮೆಯು ಗುರುವೆಬೊಮ್ಮನವಾ ||
ಹಿತವ ಮಾಡುವನವನು ಗುರುವರ
ಮತಿಗೆ ಕೊಡುವನು ಬೊಮ್ಮ ವಿದ್ಯೆಯ
ಮತಿಯ ನೀಡುತ ಗುರುವ ಬೇಡಿರಿ ಅಭಯ ಹೊಂದುವಿರೀ ||

೩)


ನಿತ್ಯವೂ ಮೋಕ್ಷವನು ಧರಿಸಿಹ
ಸತ್ಯರೂಪಿಯು ಬೊಮ್ಮನವನೂ
ಮಿಥ್ಯೆನಾಶಕೆ ಸಿರಿಧರಾರ್ಯರ ಹೊಕ್ಕಿ ನೀವೆಲ್ಲಾ ||
ವಿತ್ತವದುಶಾಶ್ವತವು ಅಲ್ಲವೊ
ಮೃತ್ಯುಇರುವನು ಬೆನ್ನ ಹಿಂದೆಯೆ
ಎತ್ತನೋಡಿದರತ್ತಕಾವಳ ಗುರುವು ಇಲ್ಲದಿರೇ ||




೪)
ಯಾವುದನು ಸನಕಾದಿಮುನಿಗಳು
ಯಾವುದನುಮುನಿ ಶುಕನು ಪಡೆದನೊ
ಯಾವುದನು ದೇವಾದಿದೇವರು ಪಡೆಯ ಬಯಸಿದರೋ ||
ಆ ವಿಶೇಷಕೆ ಬೊಮ್ಮನೆನುವರು
ಆ ವಿಶೇಷವೆ ಸಿರಿಧರಾರ್ಯರು
ಆ ವಿಶೇಷದ ಗುರುಗೆ ವಂದಿಸಿ ಮೋಕ್ಷ ಪಡೆಯುವಿರೀ ||

೫)


ಶ್ರುತಿಯು ಓಂಕಾರವನು ಬಗೆಯಲಿ
ಅತಿಯ ವಿಧದಲಿ ಭಾಗ ಮಾಡಿತು
ಅತಿಯ ಕೊನೆಯಾ ರೂಪವದುವೇ ಬೊಮ್ಮ ಎಂದಿಹುದೂ ||
ಯತಿಗಳಲಿಅತಿ ಉತ್ತಮೋತ್ತಮ
ಜೊತೆಗೆ ಕರುಣಾ ಮೂರ್ತಿ ಸಿರಿಧರ
ಅತಿವಿಶೇಷದ ಬೊಮ್ಮರೂಪವು ತಾನೆ ಆಗಿಹರೂ ||

೬)
ಲಿಂಗ ಬೇಧ ವು ಇಲ್ಲದಿರುವಾ
ಅಂಗ ದೇಹದ ಪರಿವೆ ಇರದಿಹ
ರಂಗ ರೂಪಿಯು ಅದುವೆ ಬೊಮ್ಮನು ಗುರುಗಳಾಗಿಹರೂ ||
ಮಂಗಳದ ಆ ದಿವ್ಯ ರೂಪದಿ
ತಂಗಿರುವ ಗುರು ಸಿರಿಧರಾರ್ಯಗೆ
ಮಂಗಳಾಕಾಂಕ್ಷಿಗಳು ಬಾಗಿರಿ ನಮಿಸಿರನವರತಾ ||




೭)

ಯಾವವಿಷಯವ ತಿಳಿಯೆ ಶೋಕವು
ಧಾವಿಸುವುದೋ ಮನದ ಹೊರಗಡೆ
ಆವಿಶೇಷಕೆ ಶ್ರುತಿಯು ಹೇಳಿತು ನೀನೆಬೊಮ್ಮನಿಹೇ ||
ಯಾವುದದು ಸರ್ವಕ್ಕು ಹೆಚ್ಚೆಂ-
ಬಾವಿಶೇಷಕೆ ಶಾಂತ ನಿರ್ಗುಣ
ದಾವಿಶೇಷದ ಬೊಮ್ಮನೆಂದಿಹರವರೆಗುರುವರರೂ ||

೮)
ಎರಡನೆಯದಿಲ್ಲದೆಲೆ ಇರುವಾ
ಸರುವತತ್ವಕೆ ಮೀರಿ ನಿಂತಿಹ
ಹಿರಿಯರೂಪಕೆ ಹಿರಿಯರಾನುಡಿ ನೀನೆ ಬೊಮ್ಮನಿಹೇ ||
ಗುರುವರರು ಆ ಬ್ರಹ್ಮ ತತ್ವದಿ
ವಿರಮಿಸುತಲದು ನುಡಿದ ಅಭಯವು
ಮೊರೆಯ ಹೊಕ್ಕಿಹ ಜನರ ಒಳಿತಿಗೆ ಒಳಿತು ನೀತಿಳಿಯೋ ||

೯)
ಜ್ಞಾನವಿಲ್ಲದೆ ವಿಷಯ ವಾಸನೆ
ಯನ್ನು ಬಿಡದಲೆ ಆಪ ದುಃಖವು
ನಾನುಹೋದರೆ ಬೊಮ್ಮನಾಗುವೆ ಎಂಬ ಸಂಗತಿಯೂ ||
ಜ್ಞಾನಿಗದುತಿಳಿಯುವುದು ಆಗಲೆ
ನಾನುಕಳೆಯುತ ಗುರುಗೆ ಬಾಗಲು
ನೀನೆ ಪೊರೆಯಲು ಬೇಕು ಎನ್ನುತ ಶರಣು ಹೊಕ್ಕಿರಲೂ ||



೧೦)
ಸಕಲ ಜೀವಕು ಬೇದ ತೋರದ
ಸಕಲ ದೇವಗು ಮೀರಿ ನಿಂತಿಹ
ಸಕಲ ತತ್ವದ ಸಾರವಾಗಿಹ ತತ್ವರಾಜವದೂ ||
ಚಕಿತಗೊಳಿಸುವುದದರ ಹಿರಿಮೆಯ
ಲಖಿಲ ಜಗಕೇ ದಾರಿ ತೋರುತ
ಸಕಲ ಜನರೂ ಬಾಗಿರೀಆ ತತ್ವ ರಾಜನಿಗೇ ||

೧೧)

ಭಿನ್ನತೆಯ ಕಾರಣದಿ ಭೀತಿಯು
ಮಾನವಗೆ ಆಗುವುದು ಸಹಜವು
ನಾನೆ ಬೊಮ್ಮನು ಎಂದು ತಿಳಿದಾ ಜ್ಞಾನಿಗಾಗದದೂ ||
ನಾನೆ ಬೊಮ್ಮವು ನಾನೆ ಅಭಯವು
ನಾನೆ ಆನಂದಾದಿ ರೂಪವು
ಎನ್ನುತಲಿ ನುಡಿದಿರುವ ಗುರುವಿಗೆ ಶರಣು ಬಂದಿಹೆನೂ ||

೧೨)
ಆದಿ ಯಾವುದೊ ಅದುವು ನೀನೇ
ಹಾದಿ ಯಾವುದೊ ಅದುವು ನೀನೇ
ಸಾಧಕನ ಉದ್ದರಿಪ ಶಕ್ತಿಯು ನೀನೆ ಗುರುವರನೇ ||
ಸಾಧನೆಯ ಹಾದಿಯಲಿ ಬರುವಾ
ಬಾಧೆ ಕಳೆವವ ನೀನೆ ಸಿರಿಧರ
ಬೋಧಿಸೆನಗೇ ಅಭಯ ರೂಪದಿ ಅಭಯದಾನಂದಾ ||

೧೩)
ಅರಿವು ಮರೆವನು ಬಿಟ್ಟು ನಿಶ್ಚಲ
ತರದಿಇರುವವ ನವನು ಬೊಮ್ಮನು
ನಿರತಿಶಯದಾ ಸುಖವ ಕೊಡುವನು ಅವನೆ ಗುರುವರನೂ ||
ಎರಡು ಇಲ್ಲದ ಏಕವಾಗಿಹ
ಗುರುವಿನಾರೂಪವನು ಪೊಗಳಲು
ಅರಿಯೆನೆಂದಿತು ತಾಯಿ ವಾಣಿಯು ಅವನೆ ಗುರುವರನೂ ||


-----------------------------------------------------------------------------
-----------------------------------------------------------------------------
kallareguru.blogspot.com

No comments:

Post a Comment